ಕಾರ್ಪೊರೆಟ್ ಸಿಬ್ಬಂದಿ ಸಾರಿಗೆಗೆ ಇವಿ ಬಸ್ ಸೇವೆ ಬೆಂಗಳೂರಿನ ಎನ್ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ನಿಂದ ದೇಶದಲ್ಲೇ ಮೊದಲ ಪ್ರಯತ್ನ

ಬೆಂಗಳೂರು: ಶಾಲಾ ಮಕ್ಕಳು ಮತ್ತು ಕಾರ್ಪೊರೆಟ್ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಎನ್ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ ದೇಶದಲ್ಲಿಯೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ವಿದ್ಯುಚ್ಚಾಲಿತ (ಇವಿ) ಬಸ್ಗಳನ್ನು ಪರಿಚಯಿಸಿದೆ.
ಇವಿ ಬಸ್ ತಯಾರಕ ಕಂಪೆನಿಯಾಗಿರುವ ಐಷರ್ ಮೊದಲ ಬ್ಯಾಚಿನ ಬಸ್ಗಳನ್ನು ಇಂದು ಎನ್ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ಗೆ ಹಸ್ತಾಂತರ ಮಾಡಿದೆ. 2007ರಲ್ಲಿ ಆರಂಭವಾದ ಎನ್ವಿಎಸ್ ಪ್ರಸ್ತುತ ಬಸ್, ಮಿನಿಬಸ್ ಮತ್ತು ಕಾರುಗಳು ಸೇರಿದಂತೆ ಸುಮಾರು 900 ಬಸ್ಗಳನ್ನು ಹೊಂದಿದ್ದು, 500ಕ್ಕೂ ಹೆಚ್ಚು ವಾಹನಗಳ ಒಡೆತನ ಹೊಂದಿದೆ. ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ತಂತ್ರಜ್ಞಾನ ಅಪ್ಲಿಕೇಷನ್ ಪರಿಚಯಿಸಿದ ಕೀರ್ತಿಯನ್ನು ಎನ್ವಿಎಸ್ ಹೊಂದಿದೆ. ಕಂಪೆನಿಯ ರೂರೈಡ್ಸ್ (Roorides) ಅಪ್ಲಿಕೇಷನ್ ಮೂಲಕ ಎನ್ವಿಎಸ್ ಸಂಕೀರ್ಣವಾಗಿರುವ ಕಾರ್ಪೊರೆಟ್ ಸಿಬ್ಬಂದಿ ಮತ್ತು ಶಾಲಾಮಕ್ಕಳ ಸಾರಿಗೆಯನ್ನು ಸರಳಗೊಳಿಸಿದ್ದು, ಬಳಕೆದಾರರ ಅನುಭವವನ್ನು ವಿಸ್ತರಿಸಿದೆ.
Advertisement
ಜಾಹೀರಾತಿಗಾಗಿ ಸಂಪರ್ಕಿಸಿ 6362546216
ಪ್ರಸ್ತುತ ಎಲೆಕ್ಟ್ರಿಕ್ ಬಸ್ಗಳನ್ನೂ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪರಿಚಯಿಸುವ ಮೂಲಕ ಎನ್ವಿಎಸ್ ದೇಶದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಕಂಪೆನಿ ಎನಿಸಿದೆ. ಇವಿ ಬಸ್ ವೆಚ್ಚ ಬಹಳ ದುಬಾರಿಯಾಗಿದ್ದು, ಒಂದು ಬಸ್ನ ವೆಚ್ಚದಲ್ಲಿ ಮೂರರಿಂದ ನಾಲ್ಕು ಸಾಮಾನ್ಯ ಡೀಸೆಲ್ಚಾಲಿತ ಬಸ್ಗಳನ್ನು ಖರೀದಿಸಲು ಸಾಧ್ಯವಾಗುವುದರಿಂದ ಆದಾಯ- ವೆಚ್ಚದ ಲೆಕ್ಕಾಚಾರದಲ್ಲಿ ಇವಿ ಬಸ್ಗಳನ್ನು ಸಿಬ್ಬಂದಿ ಸಾರಿಗೆಗೆ ಬಳಸುವುದು ಆದಾಯಾತ್ಮಕವಾಗಿ ಸವಾಲಿನ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಕೇವಲ ಸರಕಾರಿ ಘಟಕಗಳು ಮಾತ್ರ ಇವಿ ಬಸ್ಗಳನ್ನು ಖರೀದಿಸುವುದಾಗಲೀ ಅಥವಾ ಉತ್ಪಾದಕರೊಂದಿಗೆ ಒಪ್ಪಂದದ ಮೂಲಕ ಬಳಸುತ್ತಿವೆ.
ಮೊದಲ ಬಸ್ ಸ್ವೀಕರಿಸಿ ಪತ್ರಕರ್ತಗೊಂದಿಗೆ ಮಾತನಾಡಿದ ಎನ್ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ನ ಸ್ಥಾಪಕ ಮತ್ತು ಸಿಇಒ ಎನ್.ವಿ. ನಾಗರಾಜ್ ಅವರು “ಇವಿ ಬಸ್ಗಳಿಗೆ ಸರಕಾರ ಸಹಾಯಧನ ನೀಡುವುದಿಲ್ಲ. ಹಾಗಾಗಿ ಈ ಬಸ್ಗಳು ದುಬಾರಿ. ಅನೇಕ ಕಂಪೆನಿಗಳು ಸುಸ್ಥಿರ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಒಲವು ಹೊಂದಿದ್ದು ಇವಿ ಬಸ್ಗಳು ಸಾಮಾನ್ಯ ಬಸ್ಗಳಿಗಿಂತ ಮೂರ್ನಾಲ್ಕು ಪಟ್ಟು ದುಬಾರಿಯಾಗುವುದರಿಂದ ತಾವೇ ಖರೀದಿಸಲು ಮುಂದಾಗುತ್ತಿಲ್ಲ. ಖಾಸಗಿ ಸೇವಾ ಸಂಸ್ಥೆಗಳೂ ಇದೇ ಕಾರಣಕ್ಕೆ ಹಿಂದೇಟು ಹಾಕುತ್ತವೆ. ಆದರೆ ವಿನೂತನವಾದ ವಹಿವಾಟು ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದು ಆ ಮೂಲಕ ಖಾಸಗಿ ಕಂಪೆನಿಗಳು ಮತ್ತು ಉತ್ಪಾದಕ ಕಂಪೆನಿಗಳ ಕಾರ್ಬನ್ ಫುಟ್ಪ್ರಿಂಟ್ ಇಳಿಕೆಯ ಗುರಿ ಈಡೇರಿಕೆಗೆ ನೆರವಾಗಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
“ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಎನ್ವಿಎಸ್ ಸಿಬ್ಬಂದಿ ಸಾರಿಗೆ ಸೊಲ್ಯೂಷನ್ ಪರಿಚಯಿಸಿದ್ದು, ವಿಶ್ವಾಸಾರ್ಹತೆ, ಸಮಯದ ನಿಖರತೆ, ಸುರಕ್ಷತೆ ಮತ್ತು ಸ್ಪರ್ಧಾತ್ಮಕ ಬೆಲೆಗೆ ಒತ್ತು ನೀಡುತ್ತಿದ್ದೇವೆ. ಸೇವೆಗಾಗಿ ಹಲವು ಆಯ್ಕೆಗಳನ್ನು ನಾವು ಗ್ರಾಹಕ ಕಂಪೆನಿಗಳಿಗೆ ಒದಗಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಕಾರ್ಪೊರೆಟ್ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಇವಿ ಬಸ್ಗಳ ಪರಿಚಯ ಸ್ವಚ್ಛ ಮತ್ತು ಪರಿಸರಸ್ನೇಹಿ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಕಾರ್ಪೊರೆಟ್ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಬೆಂಚ್ಮಾರ್ಕ್ ಸೃಷ್ಟಿಸಲಿದೆ. ದೇಶದ ಕಾರ್ಪೊರೆಟ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಿದೆ ಎಂದು ಎನ್ವಿಎಸ್ ನಂಬಿದೆ.
ಈ ಸಂದರ್ಭದಲ್ಲಿ ಎನ್ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ ಇಂದು ಭವಿಷ್ಯದ ಸುಸ್ಥಿರ ಸಾರಿಗೆಯ ಕುರಿತು ವಿಚಾರಗೋಷ್ಠಿಯನ್ನೂ ಆಯೋಜಿಸಿತ್ತು. ಐಷರ್ನ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಸುರೇಶ್ ಚೆಟ್ಟಿಯಾರ್, ಪಾಕೆಟ್ ಎಫ್ಎಂನ ತೇಜಸ್ವಿ ಜೀವೇಶ್ವರ್, ಜೆಎಲ್ಎಲ್ ಸೀನಿಯರ್ ಡೈರೆಕ್ಟರ್ ಅರವಿಂದ್ ನಾರಾಯಣ್, ಗ್ರಾಂಟ್ ಥಾರ್ನ್ಟನ್ನ ವಿಶ್ವನಾಥ್ ಕೃಷ್ಣಮೂರ್ತಿ, ಐಡಿಯಾಲ್ಯಾಬ್ಸ್ನ ಅಭಿಷೇಕ್ ಪ್ರಸಾದ್, ಎಥರ್ ಎನರ್ಜಿಯ ಕೃತಂಜಯ್ ಶರ್ಮಾ, ಐಐಎಸ್ಎಸ್ಸಿಯ ಫರ್ಖಾನ್ ಭಟ್ ಇನ್ನಿತರರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಸುಸ್ಥಿರ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುಚ್ಛಾಲಿತ ವಾಹನಗಳ ಮಹತ್ವವನ್ನು ಒತ್ತಿ ಹೇಳಿದರು.
ಐಷರ್ನ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಸುರೇಶ್ ಚೆಟ್ಟಿಯಾರ್ ಅವರು ಮಾತನಾಡಿ “ಸುಸ್ಥಿರ ಭವಿಷ್ಯಕ್ಕೆ ಇವಿ ಬಸ್ಗಳು ಸಹಕಾರಿ. ಪರಿಸರಸ್ನೇಹಿ ಮೊಬಿಲಿಟಿ ಮೂಲಕ ಇಂಗಾಲದ ಮಾಲಿನ್ಯವನ್ನು ಗಮನಾರ್ಹವಾಗಿ ತಗ್ಗಿಸಲು ಕಂಪೆನಿ ಹಲವು ವಿನೂತನ ಪರ್ಯಾಯ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಪರಿಸರಸ್ನೇಹಿ ಭವಿಷ್ಯದತ್ತ ಹೆಜ್ಜೆ ಹಾಕಲು ನಮ್ಮ ಗ್ರಾಹಕರಿಗೆ ನೆರವಾಗುತ್ತಿದ್ದೇವೆ” ಎಂದು ಹೇಳಿದರು