ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ*

ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ*
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶವಾಗುವುದು. ಹೀಗಾಗಿ ಸಂಸ್ಕೃತಿಯ ಬೇರುಗಳೆನಿಸಿದ ಈ ನೆಲದ ಜನಪದ ಪರಂಪರೆಯನ್ನು ನಮ್ಮ ಯುವಪೀಳಿಗೆಗೆ ತಲುಪಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.

ಪರಂಪರಾ ಕಲ್ಚರಲ್ ಫೌಂಡೇಷನ್ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ರಂಗಗೌರವ ಮತ್ತು ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕನ್ನಡದ ಜನಪದವು ಜಗತ್ತಿನ ಎಲ್ಲ ಮನಸುಗಳನ್ನು ಸೂರೆಗೊಳ್ಳುವಷ್ಟು ಸಂಪದ್ಭರಿತವಾಗಿದೆ. ಅದರ ಉಳಿವಿನ ಬಗ್ಗೆ ಗಂಭೀರವಾಗಿ ಆಲೋಚಿಸದಿದ್ದರೆ ಮೂಲ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತದೆ. ತಮ್ಮ ಖುಷಿಗಾಗಿ ಹಾಡಿಕೊಳ್ಳುತ್ತಿದ್ದ ಜನಪದ ಕಲಾವಿದರ ಸರಕನ್ನು ಮಾರಾಟದ ಸರಕಾಗಿಸಿಕೊಂಡಿರುವ ನಾಗರಿಕರ ಸೀಮಿತ ವ್ಯಾಪ್ತಿಯ ಕಡೆ ಗಮನ ಹರಿಸಬೇಕಿದೆ ಎಂದರು.

ರಂಗಗೌರವ ಸ್ವೀಕರಿಸಿ ಮಾತನಾಡಿದ ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಘಟಕ, ರಂಗಕರ್ಮಿ ಪಲ್ಲಕ್ಕಿ ರಾಧಾಕೃಷ್ಣ ಪರಂಪರೆ ಮತ್ತು ಸಂಸ್ಕೃತಿ ಜೊತೆಜೊತೆಯಾಗಿಯೇ ಇರುವಂತಹುದು. ಜನರ ಮನಸ್ಸನ್ನು ಮುಟ್ಟದ ಸರಕು ಎಷ್ಟೇ ಮಹತ್ವದ್ದಾದರೂ ಉಪಯೋಗವಿಲ್ಲ. ಪಂಡಿತರು, ಪಾಮರರೆಲ್ಲರ ಸ್ವತ್ತು ಜನಪದ. ಎಲ್ಲರಿಗೂ ಸುಲಭವಾಗಿ ಅರ್ಥವಾಗಬಲ್ಲ ನೆಲೆಯಲ್ಲಿ ಅದು ತೆರೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾರ್ಯಕ್ರಮಗಳನ್ನು ರೂಪಿಸಬೆಕಾದ ಅಗತ್ಯವಿದೆ ಎಂದರು.

ಗಿನ್ನೆಸ್ ದಾಖಲೆ ಬರೆದ ಕದ್ರಿ ಗೋಪಾಲನಾಥರ ಶಿಷ್ಯೆ ಸ್ಯಾಕ್ಸೋಫೋನ್ ಸುಬ್ಬಲಕ್ಷ್ಮಿ ಮಾತನಾಡಿ ಎಲ್ಲ ಸಂಗೀತ ಮತ್ತು ನೃತ್ಯಗಳ ತಾಯಿಬೇರು ಜನಪದವೇ ಆಗಿದೆ. ಮಡಿವಂತರು ಈ ವಾಸ್ತವ ಸತ್ಯವನ್ನು ತಿಳಿಸಲು ಹಿಂಜರಿಯುತ್ತಾರೆ. ಆದರೆ ಯಾವತ್ತೂ ಸತ್ಯ ಮಡಿಲ ಕೆಂಡವಿದ್ದಂತೆ. ಅದು ತನ್ನನ್ನು ತಾನು ಅಭಿವ್ಯಕ್ತಗೊಳಿಸುತ್ತದೆ ಎಂದರು. 

ರಂಗಗೌರವಕ್ಕೆ ಪಾತ್ರರಾದ ಇನ್ನಿತರರೆಂದರೆ ನಾಟಕಕಾರ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ರಂಗನಿರ್ದೇಶಕ ರೂಪಾಂತರ ತಂಡದ ಕೆ.ಎಸ್.ಡಿ.ಎಲ್ ಚಂದ್ರು, ವಿಮಾನಪುರ ಸಹಕಾರ ಸಂಘದ ಅಧ್ಯಕ್ಷ ಸಿಜೆ ಮಾರುತಿ, ವಾಲ್ಮೀಕಿ ಪತ್ರಿಕೆಯ ಸಹಸಂಪಾದಕ ನಾಗರಾಜ ಗಾಣದ ಹುಣಿಸೆ. ಪರಂಪರಾ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಜಿ.ಪಿ. ರಾಮಣ್ಣ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ಕಾದಂಬರಿಯನ್ನು ನಾಟಕಕಾರ ಡಾ. ಎಂ. ಬೈರೇಗೌಡ ರಂಗರೂಪಕ್ಕೆ ತಂದು, ರೂಪಾಂತರ ತಂಡದ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ನಾಟಕದ ನಾಲ್ಕನೇ ಪ್ರದರ್ಶನ ಇದಾಗಿತ್ತು ಬೆಳಕಿನ ನಿರ್ವಹಣೆ ಮಧು ಮಳವಳ್ಳಿ, ಪ್ರಸಾದನ: ರಾಮಕೃಷ್ಣ ಬೆಳ್ತೂರ್, ಸಂಗೀತ ದೇಸೀ ಮೋಹನ್ ಮತ್ತು ರತ್ನಾ ಸಕಲೇಶಪುರ, ವಿನ್ಯಾಸ ರಾಜು ರೂಪಾಂತರ, ಕಲೆ: ವಾದಿರಾಜ್, ಕೆ.ಎಸ್.ಡಿ.ಎಲ್ ಚಂದ್ರು, ಸಹನಿರ್ದೇಶನ: ಎನ್. ರಾಮಚಂದ್ರ ಇವರದಾಗಿತ್ತು.

ಪ್ರಾರಂಭದಲ್ಲಿ ಏಣಗಿ ಪ್ರಭಾಕರ್ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.  ಕುಮಾರಿ ಪಿ. ರಿಷಿಕಾ ಅವರ ನೃತ್ಯ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಜಿ. ಮಧುಸೂಧನ ನಾಯಕ್ ಹಾಗೂ ಎಸ್. ಸುಧಾಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು.