ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಈ ಕೂಡಲೇ ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು : ಸಚಿವ ಈಶ್ವರ್ ಖಂಡ್ರೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಈ ಕೂಡಲೇ ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು : ಸಚಿವ ಈಶ್ವರ್ ಖಂಡ್ರೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಾ ಕಾರಣ ನೋಟಿಸ್ ನೀಡುವ ಮೂಲಕ ಪಕ್ಷಪಾತದಿಂದ ವರ್ತಿಸುತ್ತಿರುವ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಈ ಕೂಡಲೇ ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿಂದು ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಮತ್ತು ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದು, ಅವರು ಯಶಸ್ವಿಯಾಗುವುದಿಲ್ಲ ಎಂದರು. ಅಂತಹ ದುಸ್ಸಾಹಸಕ್ಕೆ ಬಿಜೆಪಿ ಅಥವಾ ಕೇಂದ್ರ ಸರ್ಕಾರ ಕೈಹಾಕಿದರೆ ಮುಂದಿನ ಪರಿಣಾಮಗಳಿಗೆ ಅವರೇ ಹೊಣೆ ಎಂದರು.
ಕೇಂದ್ರದ ಎನ್.ಡಿ.ಎ. ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಮತ್ತು 7 ಕೋಟಿ ಜನರ ಮೇಲೆ ಪ್ರಹಾರ ಮಾಡುತ್ತಿದೆ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಮತ್ತು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದರು.
ಬರ ಪರಿಹಾರ, ನೆರೆ ಪರಿಹಾರ ಮತ್ತು ರಾಜ್ಯಕ್ಕೆ ಪಂಚವಾರ್ಷಿಕ ಯೋಜನೆಯಲ್ಲಿ ಬರಬೇಕಾದ ಅನುದಾನದಲ್ಲೂ ಮೋಸ ಮಾಡುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುವ ಮತ್ತು ನಮ್ಮ ಹಕ್ಕಿಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಸ್ಥಿತಿ ಬಂದಿದೆ. ಕೇಂದ್ರದ ವರ್ತನೆ ಒಕ್ಕೂಟ ವ್ಯವಸ್ಥೆಗೇ ಮಾರಕವಾಗಿದೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.
ನಮ್ಮ ಹಲವು ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದರೆ ಅದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕಾರಣ. ಎನ್.ಡಿ.ಎ. ನಮ್ಮ ರಾಜ್ಯದ ಜನರಿಗೆ ಘೋರ ಅನ್ಯಾಯ ಮಾಡುತ್ತಿದೆ. 
ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ ಬಿಜೆಪಿ ಇಂದು ಭ್ರಷ್ಟಾಚಾರದ ವಿರುದ್ಧ ತಾವು ಪಾದಯಾತ್ರೆ ಮಾಡುತ್ತಿದ್ದೇವೆ ಎನ್ನುವುದು ಹಾಸ್ಯಾಸ್ಪದ. ಇವರು ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ರಾಜ್ಯದ ಜನತೆ ಈ ಪಾದಯಾತ್ರೆ ತಿರಸ್ಕರಿಸಿದ್ದಾರೆ ಎಂದರು.
2008ರಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಪಕ್ಷೇತರ ಶಾಸಕರ ಖರೀದಿಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಆಪರೇಷನ್ ಕಮಲ ಮಾಡಿ, ಕರ್ನಾಟಕಕ್ಕೆ ಇದ್ದ ಘನತೆಯನ್ನು ಹಾಳು ಮಾಡಿತು. ಕೃಷ್ಣಯ್ಯಶೆಟ್ಟಿ, ಜಗದೀಶ ಶೆಟ್ಟರ್ ಜೈಲಿಗೆ ಹೋಗಿದ್ದನ್ನು ಕರ್ನಾಟಕದ ಜನ ನೋಡಿದ್ದಾರೆ. ಇಂತಹ ಪಕ್ಷ ನಮಗೆ ನೀತಿ ಪಾಠ ಹೇಳುತ್ತಿದೆ ಎಂದರು.
2018ರಲ್ಲಿ ಕೂಡ ಬಿಜೆಪಿಗೆ ಬಹುಮತ ಬರಲಿಲ್ಲ. ಆಗಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಅವರು ಮಾಡಿದ ಮತ್ತೊಂದು ಆಪರೇಷನ್ ಕಮಲದ ಬಗ್ಗೆ ಜನರೇ ಬೇಸರಗೊಂಡಿದ್ದರು. ಆಗಿನ ಒಬ್ಬ ಶಾಸಕರು ಪಕ್ಷಾಂತರ ಮಾಡುವಂತೆ ತಮ್ಮ ಮನೆಗೆ 5 ಕೋಟಿ ರೂ. ತಂದು ಕೊಟ್ಟಿದ್ದಾರೆ ಎಂದು ಹೇಳಿದರು. ಆದರೆ ಯಾವುದೇ ಇ.ಡಿ., ಸಿಬಿಐ, ಐ.ಟಿ. ಬರಲಿಲ್ಲ ಎಂದು ದೂರಿದರು.
ಅನ್ನಭಾಗ್ಯ, ಮನಸ್ವಿನಿ, ವಸತಿ ಭಾಗ್ಯವೇ ಮೊದಲಾದ ಹಲವು ಕಲ್ಯಾಣ ಕಾರ್ಯಕ್ರಮ ನೀಡಿದ ಕಾಂಗ್ರೆಸ್, ಈಗ ಬಡ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ರಾಜ್ಯದ ಜನತೆ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೂ ಬಿಜೆಪಿ ತನ್ನ ಹಿಂದಿನ ಚಾಳಿ ಬಿಟ್ಟಿಲ್ಲ ಎಂದರು.