ತಳ ಸಮುದಾಯದ ಜನ ಪಂಚಾಯತ್ ಅಧ್ಯಕ್ಷರಾಗಲು ರಾಜೀವ್ ಗಾಂಧಿಯವರೇ ಕಾರಣ: ಪ್ರಿಯಾಂಕ್ ಖರ್ಗೆ

ತಳ ಸಮುದಾಯದ ಜನ ಪಂಚಾಯತ್ ಅಧ್ಯಕ್ಷರಾಗಲು  ರಾಜೀವ್ ಗಾಂಧಿಯವರೇ ಕಾರಣ: ಪ್ರಿಯಾಂಕ್ ಖರ್ಗೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಕಲಬುರಗಿ : ರಾಜೀವ್ ಗಾಂಧಿಯವರು 1992 ರಲ್ಲಿ ಪಂಚಾಯತ್ ರಾಜ್ ಕಾಯಿದೆಗೆ 73 ನೇ ತಿದ್ದು ಪಡಿ ತರುವ ಮೂಲಕ ಮೀಸಲಾತಿ ಜಾರಿಗೊಳಿಸಿದ್ದು ಹಿಂದುಳಿದವರು ಹಾಗೂ ಸಮಾಜದಲ್ಲಿ ತಳ ಸಮುದಾಯವ ಜನರು ಪಂಚಾಯತ್ ಅಧ್ಯಕ್ಷರಾಗಲು ಅನುಕೂಲವಾಗಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ ಕನಸನ್ನು ಈ ತಿದ್ದುಪಡಿಯ ಮೂಲಕ ರಾಜೀವ್ ಗಾಂಧಿ ನನಸು ಮಾಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಿಂದ ಬಹಳಷ್ಟು ಜನರು ನಾಯಕರಾಗಿ ಬೆಳೆದಿದ್ದಾರೆ. ಹಾಗಾಗಿ, ಪಂಚಾಯತ್ ರಾಜ್ ವ್ಯವಸ್ಥೆ ನಾಯಕರನ್ನು ಬೆಳೆಸುವ ಕಾರ್ಖಾನೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನೀಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜೀವಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುತ್ತಿದ್ದರು.

ರಾಜ್ಯದ ಮಟ್ಟಿಗೆ ಇಂದು ಐತಿಹಾಸಿಕ ದಿನವಾಗಿದೆ, ದೇಶ ಕಂಡ ಮಹಾನ್ ನಾಯಕರಾದ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜಯಂತಿ ಆಚರಿಸಲಾಗುತ್ತಿದೆ. ಅರಸು ಅವರು ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಇಂದು ರಾಷ್ಟ್ರಮಟ್ಟದಲ್ಲಿ ಬೆಳೆಯುವುದಕ್ಕೆ ಅರಸು ಅವರ ಆಶೀರ್ವಾದ ಕಾರಣವಾಗಿದೆ ಎಂದರು.

ಈ ಮಹತ್ವದ ದಿನದಂದು ಪಂಚಾಯತ್ ರಾಜ್ ರಾಜೀವ್ ಗಾಂಧಿ ಫೆಲೋಶಿಪ್ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಇಬ್ಬರು ಮಹನೀಯರ ಆಶಯದಂತೆ ಸಮಾಜದ ಕಟ್ಟಕಡೆಯ ಸಾಮಾನ್ಯ ನಾಗರಿಕರಿಗೆ ಸೌಲಭ್ಯ ಒಗದಗಿಸುತ್ತಿದ್ದೇವೆ. ಇದು ಹೆಮ್ಮೆಯ ಸಂಗತಿಯಾಗಿದೆ. ರಾಜೀವ್ ಗಾಂಧಿ ಅವರ ದೂರದೃಷ್ಟಿಯಿಂದಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಇಂದು ಮಾಹಿತಿ ತಂತ್ರಜ್ಞಾನ ಕ್ರಾಂತಿಯಾಗಿದೆ. ಪರಿಣಾಮವಾಗಿ 4 ಲಕ್ಷ ಕೋಟಿ ಐಟಿ ಸೇವೆಗಳು ರಫ್ತಾಗಿದ್ದು ರಾಜ್ಯ ವಿಶ್ವದ ನಾಲ್ಕನೆಯ ಅತಿದೊಡ್ಡ ಕ್ಲಸ್ಟರ್ ಆಗಿ ಹೊರಹೊಮ್ಮಿದೆ ಎಂದರು.

ಸಮೃದ್ದ, ಸಶಕ್ತ ಹಾಗೂ ಪ್ರಬುದ್ಧ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲ ನಮ್ಮೊಂದಿಗೆ ಕೈಜೋಡಿಸಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು. ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಉಮಾಮಹಾದೇವನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯಿದೆ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಅಂದಿನಿಂದ ಇಲಾಖೆ ಗ್ರಾಮೀಣಾಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. 2010 ರಲ್ಲಿ ಕಾಯಿದೆಗೆ ತಿದ್ದಪಡಿ ತಂದು ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಇದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ ಎಂದರು.

ಸಚಿವ ಶರಣ ಪ್ರಕಾಶ ಪಾಟೀಲ್, ಶಾಸಕ ಅಲ್ಲಮಪ್ರಭು ಮಾತನಾಡಿದರು. ವೇದಿಕೆಯ ಮೇಲೆ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, , ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್, ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂ ವೈ ಪಾಟೀಲ, ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ವಿ.ವಸಂತಕುಮಾರ, ಚಂದ್ರಶೇಖರ್ ಪಾಟೀಲ, ಜಗದೇವ ಗುತ್ತೇದಾರ, ಮಹಾಪೌರ ಯಲ್ಲಪ್ಪ ನಾಯಕೋಡಿ, ಮಜರ್ ಆಲಂಖಾನ್, ಪ್ರಾದೇಶಿಕ ಆಯುಕ್ತ ಕೃಷ್ಣ ವಾಜಪೇಯಿ, ಕೆಕೆಆರ್ ಡಿ ಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಐಜಿ ಅಜಯ್ ಹಿಲೋರಿ, ಪಂಚಾಯತ್ ರಾಜ್ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರಪಾಲಿಕೆ ಆಯುಕ್ತ ಕಮೀಷನರ್ ಭುವನೇಶ್ ಪಾಟೀಲ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರಿದ್ದರು.