ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌; ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಘೋಷಣೆ

Startup Park in Bangalore; Industries Minister M. B. Patil's announcement

ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌; ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಘೋಷಣೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ʼದೇಶದ ಸ್ಟಾರ್ಟ್‌ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದುʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಗುರುವಾರ ಇಲ್ಲಿ ಪ್ರಕಟಿಸಿದರು.

ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ʼವೆಂಚುರೈಸ್ 24ʼ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ʼಜಪಾನ್‌, ದಕ್ಷಿಣ ಕೊರಿಯಾಗಳ ಮಾದರಿಯಲ್ಲಿ ಈ ಸ್ಟಾರ್ಟ್‌ಅಪ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು. ಈ ಪಾರ್ಕ್‌ನಲ್ಲಿ ನವೋದ್ಯಮಗಳ ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ / ನಿವೇಶನ ಒದಗಿಸಲಾಗುವುದು. ಸಕಲ ಸೌಲಭ್ಯ ಸಜ್ಜಿತ, ಬಳಕೆಗೆ ಸಿದ್ಧ ಇರುವ ಕಚೇರಿಗಳು ಇಲ್ಲಿ ಇರಲಿವೆ. ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ ವಿನೂತನ ಆಲೋಚನೆಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರವನ್ನು ಇಲ್ಲಿ ಕಲ್ಪಿಸಿಕೊಡಲಾಗುವುದು ʼ ಎಂದರು.

ʼನವೋದ್ಯಮ ಸವಾಲುʼ- ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಮಧ್ಯೆ ಸಂವಹನ ಒದಗಿಸುವ ಮೂಲಕ ತಯಾರಿಕೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಮಾಡಲಿದೆ. ʼವೆಂಚುರೈಸ್-24ʼ ಕಾರ್ಯಕ್ರಮದ ಯಶಸ್ಸಿಗೆ ಟಿಐಇ ಗ್ಲೋಬಲ್‌ ಜೊತೆಗೆ ಕೈಜೋಡಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ. ಹೊಸ ಉಪಕ್ರಮಗಳನ್ನು ಪರಿಚಯಿಸುವ, ಮಾರ್ಗದರ್ಶನ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಈ ವರ್ಷದ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ನಾವು ಬದ್ಧರಾಗಿದ್ದೇವೆʼ ಎಂದು ಹೇಳಿದರು.

ಸಮಾರಂಭದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ ಅವರು ಉಪಸ್ಥಿತರಿದ್ದರು.