ಅರಣ್ಯ ಇಲಾಖೆಯ ಆಪ್ ಕಾರ್ಯಾಚರಣೆ ವೀಕ್ಷಿಸಿದ ಪವನ್ ಕಲ್ಯಾಣ್: ಆಂಧ್ರಕ್ಕೆ ತಂತ್ರಾಂಶ ನೀಡಲು ಈಶ್ವರ ಖಂಡ್ರೆ ಸಮ್ಮತಿ

Eshwar Khandre agreed to provide forest department app operation software to Andhra.

ಅರಣ್ಯ ಇಲಾಖೆಯ ಆಪ್ ಕಾರ್ಯಾಚರಣೆ ವೀಕ್ಷಿಸಿದ ಪವನ್ ಕಲ್ಯಾಣ್: ಆಂಧ್ರಕ್ಕೆ ತಂತ್ರಾಂಶ ನೀಡಲು ಈಶ್ವರ ಖಂಡ್ರೆ ಸಮ್ಮತಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಕಾಳ್ಗಿಚ್ಚು ಎಚ್ಚರಿಕೆ, ಗಸ್ತುಪಡೆ ಎಚ್ಚರಿಕೆ, ಅರಣ್ಯ ಹೊದಿಕೆ ಬದಲಾವಣೆ ಎಚ್ಚರಿಕೆ ಆಪ್, ಇ-ಎಫ್.ಐ.ಆರ್ ಸೇರಿದಂತೆ ಅರಣ್ಯ ಮತ್ತು ವೃಕ್ಷ ಸಂಪತ್ತಿನ ಸಂರಕ್ಷಣೆಗಾಗಿ ಕರ್ನಾಟಕ ಅರಣ್ಯ ಇಲಾಖೆ ಐಸಿಟಿ ವಿಭಾಗ ಸಿದ್ಧಪಡಿಸಿರುವ ವಿವಿಧ ಆನ್ವಯಿಕ (ಆಪ್)ಗಳ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಶಂಸೆ ವ್ಯಕ್ತಪಡಿಸಿದರು.

ಅರಣ್ಯ ಭವನಕ್ಕಿಂದು ಭೇಟಿ ನೀಡಿ ಅರಣ್ಯ ಇಲಾಖೆ ಇಸ್ರೋ ಸಹಯೋಗದಲ್ಲಿ ರೂಪಿಸಿರುವ ವಿವಿಧ ಆಪ್ ಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ, ಮಾಹಿತಿ ಪಡೆದ ಅವರು ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಬಳಿಕ ಅರಣ್ಯ ಸಂರಕ್ಷಣೆಗೆ ನೀಡಿರುವ ಆದ್ಯತೆ ಮತ್ತು ತೋರುತ್ತಿರುವ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿದರು.

2023-24ನ ಸಾಲಿನಲ್ಲಿ 5 ಕೋಟಿ 48 ಲಕ್ಷ ಸಸಿಗಳನ್ನು ನೆಟ್ಟು, ಅವುಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಜಿಯೋ ಟ್ಯಾಗ್ ಮಾಡಿ, ಆಡಿಟ್ ಮಾಡಿಸುತ್ತಿರುವ ಕರ್ನಾಟಕದ ಕ್ರಮ ಎಲ್ಲ ರಾಜ್ಯಗಳಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟರು.

ಈ ಎಲ್ಲ ತಂತ್ರಾಂಶಗಳ ಬಗ್ಗೆ ತಮ್ಮ ಅಧಿಕಾರಿಗಳಿಗೂ ತರಬೇತಿ ನೀಡುವಂತೆ ಮತ್ತು ತಂತ್ರಾಂಶ ಪೂರೈಸುವಂತೆ ಪವನ್ ಕಲ್ಯಾಣ್ ಮನವಿ ಮಾಡಿದರು.

ಈ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಬೇರೆ ಬೇರೆ ಆದರೂ, ನಾವೆಲ್ಲರೂ ಭಾರತೀಯರೇ ಆಗಿದ್ದೇವೆ. ಯಾವುದೇ ರಾಜ್ಯದಲ್ಲಿ ತಾಪಮಾನ ಏರಿಕೆ ಆದರೂ ಅದು ಮತ್ತೊಂದು ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆಂಧ್ರದಲ್ಲಿನ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಗತ್ಯ ತರಬೇತಿ, ತಂತ್ರಾಂಶ ಒದಗಿಸುವ ಭರವಸೆ ನೀಡಿದರು. 

ಸಭೆಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದರು.